ನಿನ್ನ ಕೋಪಕ್ಕೀಗ ಮೊದಲ ಅನಿವರ್ಸರಿ..!

Share:
ಹಾಯ್, ಮರೆತುಬಿಡಬೇಕು ಅಂತ ಪ್ರತಿಸಾರಿ ಅಂದುಕೊಂಡಾಗಲೆಲ್ಲ ಮಲ್ಲಿಗೆ ತೂಕದ ನೀನು ನೆನಪಾಗುತ್ತಿ. ಉದ್ದಜಡೆಯ, ಮುಗ್ಧ ನಗೆಯ ಮುದ್ದುಮುದ್ದಾದ ನಿನ್ನ ಇನ್ನೊಸೆನ್ಸ್ ವ್ಯಕ್ತಿತ್ವ ನೆನಪಾಗುತ್ತೆ ಗೆಳತಿ. ನೀನು ನನ್ನಲ್ಲಿ ಕೋಪಿಸಿಕೊಂಡು ಇವತ್ತಿಗೆ ಭರ್ತಿ ಒಂದು ವರ್ಷವಾಗಿದೆ. ನಿನ್ನ ನೆನಪು ಸೂಜಿಮೊನೆಯಂತೆ ಪ್ರತಿದಿನ ಹೃದಯ ಚುಚ್ಚುತ್ತಿದೆ. ಫೇಸ್ಬುಕ್ ನಲ್ಲಿ ಅನ್ ಫ್ರೆಂಡ್ ಮಾಡಿ ಸ್ಟೇಟಸ್, ಫೋಟೊಗಳನ್ನು ಲೈಕ್ ಮಾಡಲಾಗದಂತೆ ನನ್ನ ಕೈಕಟ್ಟಿರುವ ನಿನ್ನ ಮೇಲೆ ತುಸು ಕೋಪವಿದೆ ನನಗೆ.


ಮೊನ್ನೆ ನಿನಗೆ ಸಾರಿ ಅಂತ ಮೆಸೆಜ್ ಮಾಡಿದ್ಯಾಕೆ ಅಂತ ನನಗಿನ್ನೂ ಅರ್ಥವಾಗಿಲ್ಲ. ನನ್ನ ಸಾವಿರಾರು ಸಾರಿಗಳಿಗೆ ಮಾರುತ್ತರ ಬರೆಯದ ನೀನು ಅವತ್ಯಾಕೋ "ತಪ್ಪು ಮಾಡದೆ ಇದ್ದರೆ ಸಾರಿ ಕೇಳೋಕೆ ಹೋಗ್ಬಾರ್ದು' ಅಂತ ಮಾರುತ್ತರ ಬರೆದುಬಿಟ್ಟೆ. ನಿನ್ನ ಮಾರುತ್ತರ ನೋಡಿ ಎಷ್ಟು ಖುಷಿಯಾಯ್ತು ಗೊತ್ತ? ಬಹುಶಃ ರಾಮನ ಫಸ್ಟ್ ಕಂಡ ಶಬರಿಗೂ ಅಷ್ಟು ಖುಷಿಯಾಗಿರಲಿಕ್ಕಿಲ್ಲ.

ಹುಡುಗನೊಬ್ಬನ ಪ್ರೀತಿ ಪ್ರಿಯತಮೆ ಹೊರತುಪಡಿಸಿ ಉಳಿದ ಎಲ್ಲರಿಗೂ ಗೊತ್ತಾಗಿರುತ್ತಂತೆ. ಆದರೆ ಹುಡುಗಿಯ ಪ್ರೀತಿ ಪ್ರಿಯತಮನ ಬಿಟ್ಟು ಬೇರೆ ಯಾರಿಗೂ ತಿಳಿದಿರುವುದಿಲ್ಲವಂತೆ. ಅದೇ ರೀತಿ ನಾನು ನಿನ್ನನ್ನು ಪ್ರೀತಿಸುತ್ತಿದ್ದದ್ದು ಸ್ನೇಹಿತರೆಲ್ಲರಿಗೆ ಗೊತ್ತಾಗಿತ್ತು. ನಿನ್ನಲ್ಲಿ ನನ್ನ ಪ್ರೀತಿಯನ್ನು ಹೇಳಬೇಕೆಂದು ಮಹೂರ್ತ ಫಿಕ್ಸ್ ಮಾಡುತ್ತ ಗುಂಡಿಗೆ ಗಟ್ಟಿ ಮಾಡುತ್ತಿರುವಾಗಲೇ ನೀನು ಬೇರೆ ಊರಿಗೆ ಮನೆ ಬದಲಾಯಿಸಿದ್ದು.

ಅದೊಂದು ಕೆಟ್ಟ ಸಮಯದಲ್ಲಿ ನಾವಿಬ್ಬರು ದೂರ ದೂರ ಹೋಗಬೇಕಾಯ್ತು. ಹತ್ತಿರದಲ್ಲಿದ್ದಾಗ ಹತ್ತಿರವಿದ್ದವರು ದೂರ ಹೋದಾಗ ಮತ್ತಷ್ಟು ಹತ್ತಿರವಾಗುತ್ತಾರೆ ಅಂದುಕೊಂಡಿದ್ದೆ. ನೀನು ನನ್ನ ಕಣ್ಣೆದುರಿನಿಂದ ದೂರ ಹೋದ ನಂತರ ಏಕಾಂತದ ಸಂಜೆಯಲ್ಲಿ ನಿನ್ನ ನೆನಪು ಹೆಚ್ಚು ಕಾಡುತ್ತಿತ್ತು. ಮಿಸ್ ಯು ಅಂತ ಸಾವಿರ ಸಾರಿ ಹೇಳಿ ಮಾತನಾಡುತ್ತಿದ್ದ ನಿನ್ನ ಧ್ವನಿ ಕೆಲವೇ ತಿಂಗಳಲ್ಲಿ ನಾಟಕೀಯವಾಯಿತು.

ಆದರೆ ಅದೊಂದು ದಿನ ಪ್ರೀತಿಯ ಬಗ್ಗೆ ತಿಳಿಸಿದ್ದೇ ನನ್ನ ದೂರ ಮಾಡಲು ನಿನಗೆ ನೆಪವಾಯ್ತೆ? ನಾನು ನಿನ್ನ ಫ್ರೆಂಡ್ ಅಂದುಕೊಂಡಿದ್ದೆ. ನಾನು ಬೇರೊಬ್ಬರನ್ನು ಇಷ್ಟಪಟ್ಟಿದ್ದೀನಿ. ಗುಡ್ ಬೈ ಅಂತ ಎಸ್ ಎಂಎಸ್ ಬರೆದು ಒಂದಿಡಿ ವರ್ಷ ಸೈಲೆಂಟ್ ಮೂಡಿಗೆ ಹೋಗಲು ನಿನಗೆ ಹೇಗೆ ಮನಸ್ಸು ಬಂತು. ಗಾಯದ ಮೇಲೆ ಬರೆ ಎಳೆದಂತೆ ಫೇಸ್ಬುಕ್ ನಿಂದಲೂ ಅನ್ ಫ್ರೆಂಡ್ ಮಾಡಲು ಹೇಗೆ ಮನಸ್ಸು ಬಂತು. ಪ್ರೀತಿ ಮತ್ತು ಸ್ನೇಹಾ ಎರಡನ್ನೂ ಕಳೆದುಕೊಂಡು ಪರಿತಪಿಸಿದ ನನ್ನ ನಿಟ್ಟುಸಿರು, ಬಿಕ್ಕಳಿಕೆ ಒಮ್ಮೆಯೂ ನಿನ್ನ ಹೃದಯ ತಟ್ಟಲಿಲ್ಲವೇ?

ಕೆಲವು ನಾಟಕಗಳು ನಾಟಕ ಮುಗಿದ ನಂತರ ಅರ್ಥವಾಗುತ್ತದಂತೆ. ಆದರೆ ನೀನು ಒಂದು ವರ್ಷದ ಹಿಂದೆ ಮಾಡಿದ್ದು ನಾಟಕ ಅಂತ ಜಗತ್ತೇ ಹೇಳಿದರೂ ಒಪ್ಪಲು ನಾನು ತಯಾರಿಲ್ಲ. ಅಥವಾ ನನ್ನಲ್ಲಿ ನಿನಗೆ ಇದ್ದದ್ದು ಬರೀ ಸ್ನೇಹ ಅಂದರೆ ನನ್ನ ಮನಸ್ಸು ಒಪ್ಪದು. ಅಲ್ಲಿ ಅದೆಷ್ಟೋ ಬಾಯ್ಸ್ ಇದ್ದರೂ ನೀನು ನನ್ನನ್ನೇ ಆಯ್ಕೆ ಮಾಡಿಕೊಂಡದ್ದು ಯಾಕೆ? ದುಃಖದಲ್ಲಿ ಅಳುತ್ತ ನನ್ನ ಭುಜಕ್ಕೆ ಒರಗುತ್ತಿದ್ದದ್ದು ಯಾಕೆ? ಗುಡ್ ಮಾರ್ನಿಂಗ್ ನಿಂದ ಗುಡ್ ನೈಟ್ ತನಕ 100 ಫ್ರೀ ಎಸ್ ಎಂಎಸ್ ನನಗೆ ಮೀಸಲಿಟ್ಟಿದ್ದು ಯಾಕೆ? ಪ್ರತಿ  ಸಂಜೆಯೂ ಸಂತೆ ಬೀದಿಗಳಲ್ಲಿ ಕೈಕೈ ಹಿಡಿದು ಸುತ್ತಾಡಿದ್ದು,ಗೋಲ್ ಕಪ್ಪ ತಿನ್ನುತ್ತಿದ್ದದ್ದು. ಕಣ್ಣಲ್ಲೇ ನೀನು ನನ್ನನ್ನು ಕೊಲ್ಲುತ್ತಿದ್ದದ್ದು. ಅದೊಂದು ದಿನ ಮೂಗಿಗೆ ಮೂಗು ತಾಗಿಸಿ....  ಎಲ್ಲವೂ ಸ್ನೇಹವೇ...?

ಪ್ರಪೋಸ್ ಮಾಡದೆ ಇದ್ದರೆ ಹೃದಯದೊಳಗಿನ ಪ್ರೀತಿನಾ ದಿನಾ ದಿನಾ ಸಾಯಿಸಿ ಸ್ನೇಹದ ಮುಖವಾಡ ಧರಿಸುತ್ತ ಕಾಲ ಕಳೆಯಬಹುದಿತ್ತು. ಆದರೆ ಈ ಜಗತ್ತಿನಲ್ಲಿ ಹೇಳದೆ ಕಳೆದು ಹೋದ ಪ್ರೀತಿಯ ಲೋಕದಲ್ಲಿ ನಾನೂ ಸೇರಿ ಹೋಗಬಾರದಲ್ವ? ಅದಕ್ಕಾಗಿ ಜೀವನ ಪರ್ಯಂತ ಪರಿತಪಿಸಬಾರದಲ್ವೆ. ಅದಕ್ಕೆ ನಾನು ಪ್ರಪೋಸ್ ಮಾಡಿದ್ದು. ಆದರೆ ಅದಕ್ಕೆ ನೀಡಿದ ಮೌನದ ಶಿಕ್ಷೆ, ಸ್ನೇಹದ ಕಗ್ಗೋಲೆ ನೀಡಿದ ನೋವು ಮಾತ್ರ ಸಹಿಸಲಸಾಧ್ಯ. ನನ್ನ ಸಾವಿರ ಸಂದೇಶಗಳಿಗೆ ಒಂದಾಕ್ಕಾದರೂ ಬೈದಾದರೂ ಮಾರುತ್ತರ ಬರೆಯಬಾರದಿತ್ತೆ ಎಂದು ನಾನು ಎಷ್ಟು ಕಾದಿದ್ದೆ. ನಿನ್ನ ಒಂದು ಉತ್ತರ ನನಗೆ ಸಾಕಷ್ಟು ಆಕ್ಸಿಜನ್ ನೀಡಿದೆ.

ನನ್ನೊಂದಿಗಿರುವಾಗ ಅಳುಬುರುಕಿಯಾಗಿದ್ದ ನಿನ್ನಲ್ಲಿ ಇಂತಹ ಕಠೋರ ವ್ಯಕ್ತಿತ್ವ ಎಲ್ಲಿಂದ ಬಂತು. ನಿನಗೆ ಗೊತ್ತೆ ಕಳೆದ ವರ್ಷ ಯುಗಾದಿಯಲ್ಲಿ ನಾನು ಮಾಡಿದ ರೆವಲ್ಯೂಷನ್ ಪಟ್ಟಿಯಲ್ಲಿ ನಿನ್ನನ್ನು ಮರೆಯುವ ಗುರಿಯನ್ನೂ ಸೇರಿಸಿದ್ದೆ. ಮತ್ತೊಂದು ಯುಗಾದಿ ಹತ್ತಿರ ಬಂದರೂ ನಿನ್ನ ನೆನಪು ದೂರ ಸರಿಯುತ್ತಿಲ್ಲ. ಪ್ರತಿ ರಾತ್ರಿ ನಿದ್ದೆಯ ಮುನ್ನದ ಕನಸಿನಲ್ಲಿ ನೀನೇ ಯಾಕೆ ಕಾಡುತ್ತಿ. ನನ್ನ ಪ್ರೀತಿ ನಿನಗೆ ಬರೀ ಕ್ರಷ್ ಆಗಿತ್ತೆ? ಹೇಳೇ ಗೆಳತಿ ನಿನ್ನಲ್ಲಿ ನಿಜವಾಗಿಯೂ ಹೃದಯವಿತ್ತೇ? ಈ ಪತ್ರ ಓದಿ ಮತ್ತೆ ಮೌನಗೌರಿಯಾದರೂ ಮುಂದಿನ ಅನಿವರ್ಸರಿಗೆ ಒಂದು ಸಾಲು ಮರೆಯದಿರು. ಬಿ ಹ್ಯಾಪಿ -ಯುರ್ ಪಾಪಿ

ಪ್ರವೀಣ ಚಂದ್ರ

No comments